``ಯಾಜಿ ಯಕ್ಷ ಮಿತ್ರ`` ಪ್ರಶಸ್ತಿ ಪ್ರದಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಸೋಮವಾರ, ಡಿಸೆ೦ಬರ್ 2 , 2013
|
ಡಿಸೆ೦ಬರ್ 2, 2013
|
``ಯಾಜಿ ಯಕ್ಷ ಮಿತ್ರ`` ಪ್ರಶಸ್ತಿ ಪ್ರದಾನ
ಕುಮಟಾ :
ಯಾಜಿ ಯಕ್ಷ ಮಿತ್ರ ಮಂಡಳಿ ವತಿಯಿಂದ 'ಯಾಜಿ ಯಕ್ಷ ಮಿತ್ರ' ಪ್ರಶಸ್ತಿ ಪ್ರದಾನ ಸಮಾರಂಭ ಹವ್ಯಕ ಸಭಾಭವನದಲ್ಲಿ ನಡೆಯಿತು. 75 ವರ್ಷಗಳ ಕಾಲ ಯಕ್ಷಗಾನ ಭಾಗವತರಾಗಿ ತಮ್ಮ ಇಂಪಾದ ಧ್ವನಿಯಿಂದ ಯಕ್ಷಗಾನಪ್ರಿಯರನ್ನು ರಂಜಿಸಿದ 95ರ ವಯೋವಾನದ ಈರಪ್ಪ ಭಾಗವತ ಅವರಿಗೆ 'ಯಾಜಿ ಯಕ್ಷ ಮಿತ್ರ' ಪ್ರಶಸ್ತಿ ಜತೆಗೆ ರು. 11,111 ಹಮ್ಮಿಣಿ ನೀಡಿ ಗೌರವಿಸಲಾಯಿತು.
ವಾಚಸ್ಪತಿ ಭಟ್ಟ, ಮುರ್ಡೇಶ್ವರ ಯಕ್ಷರಕ್ಷೆ ಅಧ್ಯಕ್ಷ ಡಾ. ಐ.ಆರ್. ಹೆಗಡೆ, ನಾರಾಯಣ ಯಾಜಿ ಸಾಲೆಬೈಲು, ಯಾಜಿ ಯಕ್ಷ ಮಿತ್ರ ಮಂಡಳಿ ಅಧ್ಯಕ್ಷ ಬಳ್ಕೂರು ಕೃಷ್ಣ ಯಾಜಿ ಪ್ರಶಸ್ತಿ ಪ್ರದಾನ ಮಾಡಿದರು.
ಸನ್ಮಾನ ಸ್ವೀಕರಿಸಿದ ಈರಪ್ಪ ಭಾಗವತ, ತಮ್ಮ ಇಳಿ ವಯಸ್ಸಿನಲ್ಲೂ 40 ಹರೆಯದ ಯಕ್ಷಗಾನ ಭಾಗವತರನ್ನು ನಾಚಿಸುವ ರೀತಿಯಲ್ಲಿ 'ವಾರಣ ವದನ' ಹಾಗೂ 'ಅಬ್ಬರದ ಬಿಡ್ತಿಗೆ'ಯ ಎರಡು ಯಕ್ಷಗಾನ ಪದ್ಯಗಳನ್ನು ತಾಳ, ಮದ್ದಲೆ ಹಾಗೂ ಮೃದಂಗದ ಜೊತೆ ಸುಂದರವಾಗಿ ಹಾಡಿದರು.
ಎಲೆಮರೆ ಕಾಯಿ: ಸಮಾರಂಭವನ್ನು ಡಾ. ಐ.ಆರ್. ಹೆಗಡೆ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದಲ್ಲಿ ಅನೇಕ ಕಲಾವಿದರು ಇನ್ನು ಎಲೆಮರೆಯ ಕಾಯಿಯಾಗಿಯೇ ಉಳಿದುಕೊಂಡಿದ್ದಾರೆ. ಅಂಥವರನ್ನು ಯಾಜಿ ಮಿತ್ರ ಮಂಡಳಿ ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು. ಕೆವಿಜಿ ಬ್ಯಾಂಕಿನ ಶಾಖಾ ವ್ಯವಸ್ಥಾಪಕ ಸಾಲೇಬೈಲು ನಾರಾಯಣ ಯಾಜಿ ಮಾತನಾಡಿ, ಕಲಾವಿದಲ್ಲಿ ಪ್ರಜ್ಞೆ ಎಂಬುದು ಇದ್ದರೆ ಆತನಿಗೆ ಋಣ ಹಾಗೂ ಹೊಣೆಗಾರಿಕೆ ಎಂಬುದರ ಅರಿವಿರುತ್ತದೆ. ಈ ಎರಡೂ ಬಳ್ಕೂರು ಕೃಷ್ಣ ಯಾಜಿ ಅವರಲ್ಲಿದೆ. ಅವರ ಅಧ್ಯಕ್ಷತೆಯಲ್ಲಿರುವ ಮಂಡಳಿಯಿಂದ ಇನ್ನಷ್ಟು ಅಶಕ್ತ ಕಲಾವಿದರಿಗೆ ಸಹಾಯ ಸಿಗುವಂತಾಗಲಿ. ಇದಕ್ಕೆ ಯಕ್ಷಗಾನ ಪ್ರೇಮಿಗಳ ಸಹಕಾರವೂ ಇರಲಿ ಎಂದರು. ವಾಚಸ್ಪತಿ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದ ರಮೇಶ ಭಂಡಾರಿ ಮಾತನಾಡಿದರು. ವಿಶ್ವೇಶ್ವರ ಭಾಗವತ ಅವರ ದೇವರ ಸ್ತುತಿಯೊಂದಿಗೆ ಆರಂಭವಾಯಿತು. ಯಾಜಿ ಯಕ್ಷ ಮಿತ್ರ ಮಂಡಳಿಯ ಅನಂತ ಅಡಿ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಯಾಜಿ ಮಿತ್ರ ಮಂಡಳಿಯ ಅಧ್ಯಕ್ಷ ಬಳ್ಕೂರ ಕೃಷ್ಣ ಯಾಜಿ ಮಾತನಾಡಿ, ನನ್ನ ಯಕ್ಷಗಾನ ಬದುಕಿನಲ್ಲಿ ಕಲಾ ಭೂಮಿ ಕೆಡದಂತೆ ನೋಡಿಕೊಂಡಿದ್ದೇನೆ.
ಇದನ್ನು ನಂಬಿ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ ಅಶಕ್ತ ಕಲಾವಿದರನ್ನು ಸನ್ಮಾನಿಸಿ, ಹಮ್ಮಿಣಿ ನೀಡುವ ಕಾರ್ಯವನ್ನು ನಡೆಸಿಕೊಂಡು ಬಂದಿದ್ದೇನೆ. ಈ ಕಾರ್ಯ ಹೀಗೆ ಮುಂದುವರಿಯಬೇಕು ಎಂಬ ಉದ್ದೇಶದೊಂದಿಗೆ ಶಾಶ್ವತ ನಿಧಿ ಸ್ಥಾಪಿಸುವ ಉದ್ದೇಶ ಹೊಂದಿದ್ದೇನೆ ಎಂದರು.
ಶಿಕ್ಷಕ ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು. ಆನಂತರ ಯಕ್ಷಗಾನ ಪ್ರದರ್ಶನ ನಡೆಯಿತು.
ಕೃಪೆ :
http://www.udayavani.com/
|
|
|